Friday, June 4, 2010

ಬೆಸ್ಕಾಂ ಮತ್ತು ಆಸ್ಪತ್ರೆ ಆಡಳಿತದ ವೈಖರಿ ವಿರುದ್ದ ಮಾಜಿ ಶಾಸಕರ ವಾಗ್ದಾಳಿ
ಚಿಕ್ಕನಾಯಕನಹಳ್ಳಿ,ಜೂ.04: ತಾಲೂಕಿನ ಆಡಳಿತ ಯಂತ್ರ ಹದಗೆಟ್ಟಿದ್ದು ಇಲ್ಲಿನ ಅಧಿಕಾರಿಗಳನ್ನು ಯಾರೂ ಕೇಳುವವರೇ ಇಲ್ಲವೆಂಬ ವಾತಾವರಣ ಉಂಟಾಗಿದೆ ಎಂದು ಮಾಜಿ ಶಾಸಕ ಬಿ.ಲಕ್ಕಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಬೆಸ್ಕಾಂ ಮತ್ತು ಸಾರ್ವಜನಿಕ ಆಸ್ಪತ್ರೆಯ ಕರ್ಮಕಾಂಡ ವಿಪರೀತವಾಗಿದ್ದು ಇವೆರಡು ಇಲಾಖೆಗಳು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದಕ್ಕಿಂತ ಅನಾನೂಕೂಲಕರವಾಗಿದೆ ಎಂದು ಕಿಡಿಕಾರಿದರು.
ತಾಲೂಕಿನ ರೈತರಿಗೆ ವಿದ್ಯುತ್ ಪರಿವರ್ತಕ(ಟಿ.ಸಿ) ನೀಡುವಲ್ಲಿ ನಿರ್ಲಕ್ಷ್ಯದಿಂದ ವತರ್ಿಸುತ್ತಿದ್ದು ತೋಟದ ಸಾಲುಗಳಿಗೆ ಟಿ.ಸಿ ಒದಗಿಸಲು ಇಂತಿಷ್ಟು ಹಣವನ್ನು ನಿಗಧಿಪಡಿಸಿದ್ದು ಆ ಹಣವನ್ನು ನೀಡಿದರೆ ಮಾತ್ರ ಟಿ.ಸಿ ನೀಡುವ ಪರಿಪಾಠವನ್ನು ಇಲ್ಲಿನ ಬೆಸ್ಕಾಂ ರೂಪಿಸಿಕೊಂಡಿದೆ ಎಂದ ಅವರು, ಇವರ ಉದ್ದಟತನದಿಂದ ಕಾತ್ರಿಕೆಹಾಳ್, ಮುದ್ದೇನಹಳ್ಳಿ ಹಾಗೂ ಕೋಡಗಲ್ಲು ಭಾಗದ ರೈತರು ಬೆಸ್ಕಾಂನ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದರು. ಬೆಸ್ಕಾಂ ಅಧಿಕಾರಿಗಳು ತಮ್ಮ ಈ ವರ್ತನೆಯನ್ನು ಬದಲಾಯಿಸಿಕೊಳ್ಳದಿದ್ದರೆ ಕಛೇರಿಗೆ ಬೀಗಮುದ್ರೆ ಜಡಿದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಟ್ಟಣದ ಸಕರ್ಾರಿ ಆಸ್ಪತ್ರೆ ಆಡಳಿತದ ಸ್ಥಿತಿ ಶೋಚನೀಯವಾಗಿದ್ದು ಆಡಳಿತ ವ್ಯವಸ್ಥೆಗೆ ಸೂಕ್ತ ಶಸ್ತ್ರಕ್ರಿಯೆ ಮಾಡದಿದ್ದರೆ ಪರಿಸ್ಥಿತಿ ವಿಷಮಸ್ಥಿತಿ ತಲುಪುತ್ತದೆ ಎಂದ ಅವರು, 6ಜನ ತಜ್ಞ ವೈದ್ಯರು ಇರಬೇಕಾದ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರೊಬ್ಬರಿದ್ದು ಅವರೇ ಎಲ್ಲಾ ವಿಧಧ ರೋಗಿಗಳಿಗೆ ಔಷಧೋಪಚಾರ ಮಾಡಬೇಕಿದೆ, ಇನ್ನೊಬ್ಬರು ತಾಲೂಕು ಆಡಳಿತಾಧಿಕಾರಿಗಳಾಗಿದ್ದು ಅವರು ಇಲಾಖೆಯ ಸಭೆಗಳಿಗೆ ಹಾಗೂ ಇತರ ಸಭೆಗಳಿಗೆ ಹೋಗುವುದು ಹಾಗೂ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಘಟಕಗಳ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳುವ ಜವಬ್ದಾರಿ ಇರುವುದರಿಂದ ಇವರಿಗೂ ಕಾರ್ಯದೊತ್ತಡ ಹೆಚ್ಚಾಗಿದೆ, ಈ ಎಲ್ಲಾ ಕಾರಣಗಳಿಂದ ಇಲ್ಲಿನ ಆಸ್ಪತ್ರೆ ಪ್ರಥಮ ಚಿಕಿತ್ಸಾ ಕೇಂದ್ರವಾಗಿದೆಯೋ ಹೊರತು ಇದಕ್ಕಿಂತ ಹೆಚ್ಚಿನ ಸೇವೆಯನ್ನು ಈಗಿರುವಷ್ಟು ಸಿಬ್ಬಂದಿಯಿಂದ ನಿರೀಕ್ಷಿಸಲಾಗುತ್ತಿಲ್ಲವೆಂದರು.
ಕೆಮ್ಮು, ನೆಗಡಿ ಜ್ವರಗಳಂತಹ ಕಾಯಿಲೆಗಳಿಗೆ ಇಲ್ಲಿ ಶುಶ್ರೂಷೆ ಸಿಗುತ್ತದೆ, ಇದಕ್ಕಿಂತ ಹೆಚ್ಚಿನ ಕಾಯಿಲೆಗಳಿದ್ದರೆ ಅಂತಹ ರೋಗಿಯನ್ನು ಬೇರೆ ಆಸ್ಪತ್ರೆಗಳಿಗೆ ರೆಫರ್ ಮಾಡುತ್ತಾರೆ, ಇದು ತಪ್ಪಬೇಕು ತೀರ ಅನಿವಾರ್ಯ ಪರಿಸ್ಥಿತಿಗಳಲ್ಲಿ ರೆಫರ್ ಮಾಡಬೇಕೆ ಹೊರತು ಸಣ್ಣಪುಟ್ಟ ಕಾರಣಗಳನ್ನು ಮುಂದು ಮಾಡಿಕೊಂಡು ಬಡರೋಗಿಗಳಗೆ ಹೊರೆ ಮಾಡುವ ಪ್ರವೃತ್ತಿಯನ್ನು ಇಲ್ಲಿನ ಆಸ್ಪತ್ರೆಯವರು ತಪ್ಪಿಸಬೇಕೆಂದರು.
ಇರುವ 50ಹಾಸಿಗೆಗೆ ಅಗತ್ಯವಿರುವಷ್ಟು ವೈದ್ಯರು ಹಾಗೂ ಸಿಬ್ಬಂದಿಗಳೇ ಇಲ್ಲ, ಇಂತಹ ಸ್ಥಿತಿಯಲ್ಲಿ ಈ ಆಸ್ಪತ್ರೆಯನ್ನು 100 ಹಾಸಿಗೆಗಳಿಗೆ ಹೆಚ್ಚಿಸಿ ಕಟ್ಟಡವನ್ನು ವಿಸ್ತಾರ ಮಾಡುತ್ತಿದ್ದಾರೆ ಹೊರತು ಸೇವೆಯನ್ನಲ್ಲ ಎಂದರು.
ಈಗಿರುವ ಆಸ್ಪತ್ರೆಗೆ ಕನಿಷ್ಟ 6ಜನ ವೈದ್ಯರನ್ನು ಕೂಡಲೇ ನೇಮಿಸಬೇಕು ಹಾಗೂ ಈಗಿರುವ ವೈದ್ಯರು ಹಾಗೂ ಸಿಬ್ಬಂದಿ ಬಡರೋಗಿಗಳಿಗೆ ಸೂಕ್ತ ಆರೋಗ್ಯ ರಕ್ಷಣೆ ನೀಡಲು ಶ್ರಮ ವಹಿಸದಿದ್ದರೆ ಅಧಿಕಾರ ಶಾಹಿಯ ವರ್ತನೆಯನ್ನು ಖಂಡಿಸಿ ಆಸ್ಪತ್ರೆಯ ಮುಂದೆ ಧರಣಿ ನಡೆಸಲಾಗುವುದು ಎಂದರು. ಗೋಷ್ಟಿಯಲ್ಲಿ ಕಂಡಕ್ಟರ್ ನಿಂಗಪ್ಪ ಉಪಸ್ಥಿತರಿದ್ದರು.

No comments:

Post a Comment